[ad_1]
2
ಆಗ್ರಾ: ನಿದ್ದೆಯಿಂದ ಬೇಗನೆ ಎಬ್ಬಿಸಿರುವ ವಿಷಯಕ್ಕೆ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಹಾತ್ರಸ್ ಜಿಲ್ಲೆಯಲ್ಲಿ ನಡೆದಿದೆ. ಬೆಳ್ಳಂಬೆಳಿಗ್ಗೆ ಬೇಗ ಪತ್ನಿ ಎಬ್ಬಿಸಿದ್ದಕ್ಕೆ, ವಾಗ್ವಾದಕ್ಕಿಳಿದ 35 ವರ್ಷದ ರೈತನೊಬ್ಬ, ಕೋಪದ ಭರದಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ನಾಡಪಿಸ್ತೂಲಿನಿಂದ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಸಿಕಂದರರಾವ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪುರ್ ಜಟ್ಟಾರಿ ಗ್ರಾಮದಲ್ಲಿ ಬುಧವಾರ ಮುಂಜಾನೆ ಈ ಕೃತ್ಯ ನಡೆದಿದೆ. ಮೃತ ರೈತನನ್ನು 35 ವರ್ಷದ ಲಾಲು ಸಿಂಗ್ ಎಂದು ಗುರುತಿಸಲಾಗಿದೆ. ಈತನಿಗೆ ಪತ್ನಿ ಆಶಾ ದೇವಿ, ಆರು ವರ್ಷದ ಮಗ ಆರವ್ ಮತ್ತು ಒಂದು ವರ್ಷದ ಮಗಳು ಆರೋಹಿ ಇದ್ದಾರೆ.
ಸಿಕಂದರರಾವ್ ಗೆ ಪ್ರತಿದಿನ 7 ಗಂಟೆಗೆ ಏಳುವ ಅಭ್ಯಾಸವಿತ್ತು. ಆದರೆ, ಬುಧವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಆತನ ಪತ್ನಿ ಆಶಾ ದೇವಿ ಆತನನ್ನು ಎಬ್ಬಿಸಿದ್ದರು. ಆರು ವರ್ಷದ ಮಗನನ್ನು ಶಾಲೆಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದಾಗ, ಅಡುಗೆ ಮನೆಯ ಬಾಗಿಲು ಲಾಕ್ ಆಗಿತ್ತು. ಅದನ್ನು ತೆರೆಯಲು ಸಹಾಯ ಮಾಡುವಂತೆ ಆಕೆ ಪತಿಯನ್ನು ನಿದ್ದೆಯಿಂದ ಎಬ್ಬಿಸಿದ್ದು, ಈ ವಿಚಾರಕ್ಕೆ ಪತಿ-ಪತ್ನಿಯ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳದ ವೇಳೆ ಕೋಪಗೊಂಡ ಲಾಲು ಸಿಂಗ್ ಪತ್ನಿಯ ಮೇಲೆ ಹಲ್ಲೆ ಕೂಡಾ ಮಾಡಿದ್ದಾನೆ.
ಹೆಂಡತಿ ನಂತರ, ಜಗಳವನ್ನು ಅಲ್ಲಿಗೇ ಬಿಟ್ಟಿದ್ದು, ಮಗನನ್ನು ಶಾಲೆಗೆ ಕಳುಹಿಸಿ ಬಂದು ಪತಿಗೆ ಚಹಾ ಮಾಡಿಕೊಟ್ಟಿದ್ದಾಳೆ. ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಚಹಾ ಕುಡಿದ ಲಾಲು ಸಿಂಗ್, ನೇರವಾಗಿ ತನ್ನ ಬಾವನಿಗೆ (ಪತ್ನಿಯ ಸಹೋದರನಿಗೆ) ಫೋನ್ ಮಾಡಿದ್ದಾನೆ. “ಇದೇ ನಮ್ಮ ಕೊನೆಯ ಮಾತುಕತೆ, ನಾನು ಹೊರಡುತ್ತಿದ್ದೇನೆ, ನಿನ್ನ ತಂಗಿಯನ್ನು ಚೆನ್ನಾಗಿ ನೋಡಿಕೊ” ಎಂದು ಫೋನ್ನಲ್ಲಿ ಹೇಳಿದ್ದಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಕೋಣೆಯೊಳಗೆ ಹೋದ ಆತ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ. ಸ್ವಲ್ಪ ಹೊತ್ತಿನಲ್ಲೇ ಕೋಣೆಯ ಒಳಗಿನಿಂದ ಗುಂಡು ಹಾರಿಸಿದ ಭಾರಿ ಶಬ್ದ ಕೇಳಿಬಂದಿದೆ.
ಪೊಲೀಸರು ಘಟನಾ ಸ್ಥಳಕ್ಕೆ ಬಂದು, ಮುಚ್ಚಿದ್ದ ಕೋಣೆಯ ಬಾಗಿಲನ್ನು ಒಡೆದು ಒಳನುಗ್ಗಿದಾಗ, ಲಾಲು ಸಿಂಗ್ ರಕ್ತದ ಮಡುವಿನಲ್ಲಿ ಹಾಸಿಗೆಯ ಮೇಲೆ ಶವವಾಗಿ ಬಿದ್ದಿದ್ದನು. ಆತನ ಪಕ್ಕದಲ್ಲೇ ಆತ ಗುಂಡು ಹಾರಿಸಿಕೊಳ್ಳಲು ಬಳಸಿದ ನಾಡಪಿಸ್ತೂಲ್ ಕೂಡ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಕಂದರರಾವ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವ್ ಕುಮಾರ್, “ಘಟನಾ ಸ್ಥಳದಿಂದ ಅಕ್ರಮ ನಾಡಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕುಟುಂಬದವರು ನೀಡಿರುವ ದೂರಿನ ಆಧಾರದ ಮೇಲೆ ಮುಂದಿನ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
[ad_2]
Source link


















Leave a Reply