[ad_1]
ದಾವಣಗೆರೆ: ವಿಪಕ್ಷಗಳು ಮಹಿಳಾ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೇಂದ್ರ ಸರ್ಕಾರ ಹೊರಟಿದೆ. ಮಹಿಳಾ ವಿರೋಧಿ ಕಾಂಗ್ರೆಸ್ ಎಂಬಂತೆ ಪ್ರಚಾರ ಮಾಡಲಾಗುತ್ತಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕಿಡಿಕಾರಿದರು.
ಕ್ಷೇತ್ರ ಪುನರ್ ವಿಂಗಡನೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರ ಪುನರ್ ವಿಂಗಡನೆ ಮಸೂದೆಗೆ ಮಾತ್ರ ನಮ್ಮ ವಿರೋಧ, ಮಹಿಳಾ ಮೀಸಲಾತಿಗೆ ಅಲ್ಲ. ಪಂಚ ರಾಜ್ಯಗಳ ಚುನಾವಣೆ ನಂತರ ಸುದೀರ್ಘವಾಗಿ ಚರ್ಚಿಸಿ, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಕ್ಷೇತ್ರ ಮರು ವಿಂಗಡನೆ ಮಸೂದೆ ಅನುಷ್ಠಾನಕ್ಕೆ ತರಬಹುದಾಗಿತ್ತು ಎಂದರು.
ಮಹಿಳಾ ಮೀಸಲಾತಿ ಹೆಸರಿನಲ್ಲಿ ಗೊಂದಲ ಸೃಷ್ಠಿಸಿ, ಮಹಿಳೆಯರ ಭಾವನೆಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಆಟವಾಡುವ ಮಾತು ಆಡಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಕೇಂದ್ರ ಚುನಾವಣಾ ಆಯೋಗ ಮುಂದಾಗಬೇಕು. ಮಹಿಳಾ ವಿರೋಧಿ ಕಾಂಗ್ರೆಸ್ ಎಂಬಂತೆ ಪ್ರಚಾರ ನಡೆಸುತ್ತಿರುವುದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದರು.
2023ರಲ್ಲಿಯೇ ಮಹಿಳಾ ಮೀಸಲಾತಿಗೆ ಒಪ್ಪಿಗೆ ಸಿಕ್ಕಿರೂ ರಾಜಕೀಯ ಲಾಭಕ್ಕೋಸ್ಕರ ವಿಪಕ್ಷಗಳು ಮಹಿಳಾ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ರಾಜ್ಯಗಳಿಗೆ ಅನ್ಯಾಯ
ದೇಶದಲ್ಲಿ ಇಂಡಿ ಒಕ್ಕೂಟವು ಮಹಿಳಾ ವಿರೋಧಿ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಪಂಚ ರಾಜ್ಯಗಳ ಚುನಾವಣಾ ಹಿನ್ನೆಲೆಯಲ್ಲಿ ಬಿಲ್ ಜಾರಿಗೆ ತರಲು ಮುಂದಾಗಿತ್ತು. ಕ್ಷೇತ್ರ ಮರು ವಿಂಗಡನೆ ಸ್ವರೂಪ, ರೂಪರೇಷೆ, ಯಾವ ಸಮುದಾಯಕ್ಕೆ ಎಷ್ಟು ಮೀಸಲಾತಿ ನೀಡಲಾಗುತ್ತಿದೆ. ದಕ್ಷಿಣ ರಾಜ್ಯಗಳಿಗೆ ಆಗುವ ಅನ್ಯಾಯ ಸರಿಪಡಿಸುವ ಕುರಿತಂತೆ ಯಾವುದೇ ಸಭೆ ಕರೆದಿಲ್ಲ. ವಿಪಕ್ಷಗಳ ಅಭಿಪ್ರಾಯವನ್ನೂ ಸಹ ಕೇಳದೇ ಐದು ರಾಜ್ಯಗಳ ಚುನಾವಣೆ ಗಮನದಲ್ಲಿಟ್ಟುಕೊಂಡು ತುರ್ತು ಅಧಿವೇಶನ ಕರೆದು ಬಿಲ್ ಪಾಸ್ ಮಾಡಲು ಹೊರಟಿದ್ದ ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸೋಲಾಗಿದೆ ಎಂದು ಹೇಳಿದರು.
ಪೊಲಿಟಿಕಲ್ ಮಾರ್ಕೆಂಟಿಂಗ್ ತಂತ್ರ
ಮಹಿಳಾ ಮತದಾರರನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸುವ ಬಿಜೆಪಿ ಕುತಂತ್ರ ವಿಫಲವಾಗಿದೆ. ನಾರಿ ಶಕ್ತಿ ಎಂಬ ಬ್ರಾಂಡ್ ಹಾದಿಯಲ್ಲಿ ಮಹಿಳೆಯರನ್ನು ನೇರವಾಗಿ ತಲುಪುವ ತಂತ್ರವನ್ನು ಬಿಜೆಪಿ ರೂಪಿಸಿತ್ತು. ಮಹಿಳಾ ಮೀಸಲಾತಿ ಮಸೂದೆಯನ್ನು ಈ ಬ್ರಾಂಡ್ ನ ಸರ್ವೋಚ್ಛ ಸಾಧನೆಯಾಗಿ ಪ್ರಸ್ತುತಪಡಿಸಲಾಯಿತು. ಆದರೆ ಬಿಜೆಪಿಯು ಅತ್ಯಂತ ವ್ಯವಸ್ಥಿತ ಹಾಗೂ ಚಾಣಾಕ್ಷತನದ ಪೊಲಿಟಿಕಲ್ ಮಾರ್ಕೆಂಟಿಂಗ್ ತಂತ್ರವಾಗಿ ಬಳಸಿಕೊಳ್ಳುವ ಪ್ರಯತ್ನ ವಿಫಲವಾಗಿದೆ ಎಂದರು.
ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನತ್ ವಿಂಗಡನೆಗೆ ಬಲಿಪಶು ಮಾಡುವುದು ಸರಿಯಲ್ಲ. ಈ ಬಗ್ಗೆ ನಮಗೆ ಆತಂಕವಿದ್ದು, ಬಿಲ್ ಜಾರಿ ಮಾಡುವ ಮೊದಲು ಸಂಪೂರ್ಣ ಮಾಹಿತಿ ತಿಳಿಸಬೇಕಿತ್ತು. ಕೇವಲ ರಾಜಕೀಯ ಲಾಭಕ್ಕಾಗಿ ಮಾಡುವುದು ಸರಿಯಲ್ಲ ಎಂದು ಹೇಳಿದರು.
2023ರ ಕಾಯ್ದೆಯಲ್ಲಿ ಜನಗಣತಿ ನಂತರ ಅನುಷ್ಠಾನ ಎಂದು ತಿಳಿಸಲಾಗಿದೆ. ಆದರೆ ಈಗ 2011 ರ ಜನಗಣತಿ ಆಧಾರದಲ್ಲಿ ಮಾಡಲು ಹೊರಟಿರುವುದು ಏಕೆ? ಜಾತಿ ಜನಗಣತಿಯನ್ನು ಸೇರಿಸದಿದ್ದರೆ ಪುನರ್ ವಿಂಗಡನೆಯು ಸಾಮಾಜಿಕ ನ್ಯಾಯಕ್ಕೆ ಹೊಂದುವುದಿಲ್ಲ. ದಕ್ಷಿಣ ರಾಜ್ಯಗಳಲ್ಲಿ ಕುಟುಂಬ ನಿಯಂತ್ರಣದ ಯಶಸ್ಸಿಗೆ ಶಿಕ್ಷೆ ನೀಡುವಂತಾಗಬಾರದು. ಜನಸಂಖ್ಯೆ ನಿಯಂತ್ರಣ ಮಾಡಿದ್ದು, ದಕ್ಷಿಣ ಭಾರತ ಇದರ ಆಧಾರದ ಮೇರೆಗೆ ಮಸೂದೆ ಜಾರಿಯಾಗಿದ್ದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುತ್ತಿತ್ತು. ಬಿಜೆಪಿ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಹುನ್ನಾರ ನಡೆಸಿತು. ಆದರೆ ಮೂರನೇ ಎರಡರಷ್ಟು ಬಹುಮತ ಸಿಗಲಿಲ್ಲ ಎಂದರು.
ಪಂಚರಾಜ್ಯಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಪ್ರಧಾನಿ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಚುನಾವಣಾ ಆಯೋಗ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಅವರು ಮಾಡಿದ ಭಾಷಣದಲ್ಲಿ ವಿರೋಧ ಪಕ್ಷಗಳನ್ನು ತೆಗಳಿಕೆ ಮಾಡಿದ್ದು ಸರಿಯಲ್ಲ. ಇದನ್ನು ಆಯೋಗ ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶರಾವ್ ಜಾಧವ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ಮಂಜಮ್ಮ, ಮಂಗಳಮ್ಮ , ಎ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
[ad_2]
Source link

















Leave a Reply